ಚನ್ನರಾಯಪಟ್ಟಣ: ಕೆಲಸದ ವಿಚಾರವಾಗಿ ತಾಲ್ಲೂಕಿನ ದಿಡಗ ಗ್ರಾಮ ಪಂಚಾಯಿತಿಯ ಇಬ್ಬರು ಮಹಿಳಾ ಸಿಬ್ಬಂದಿ ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ದ್ವಿತೀಯ ದರ್ಜೆ ಸಹಾಯಕಿ (ಎಸ್ಡಿಎ) ಉಮಾ ಎಂಬುವವರು ಹೊರಗುತ್ತಿಗೆ ಸಿಬ್ಬಂದಿ ಜ್ಯೋತಿ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೆ.ಎಸ್.ಪ್ರಕಾಶ್ ಅವರ ಎದುರೇ ಗಲಾಟೆ ನಡೆದಿದ್ದು ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಎಸ್ಡಿಎ ಉಮಾ ಸೇವೆಗೆ ಹಾಜರಾಗಿ ಆರು ತಿಂಗಳಷ್ಟೇ ಕಳೆದಿದೆ. ಆದರೆ ಲಾಗಿನ್, ಹಾಜರಾತಿ ನಮೂದಿಸುವಾಗ ಜ್ಯೋತಿ ತಾರತಮ್ಯ ಮಾಡುತ್ತಿದ್ದರು. ನನಗೆ ಕೆಲಸ ಮಾಡಲು ಅವಕಾಶ ನೀಡುತ್ತಿಲ್ಲವೆಂದು ಉಮಾ ಆಕ್ರೋಶದಿಂದ ಹೊಡೆದಿದ್ದಾರೆ ಎನ್ನಲಾಗಿದೆ.
ಇಬ್ಬರಿಗೂ ಕೆಲಸ ಹಂಚಿಕೆ ಮಾಡಲಾಗಿದೆ. ಹೊಂದಾಣಿಕೆ ಕೊರತೆಯಿಂದ ಸಮಸ್ಯೆಯಾಗಿದೆ. ಇಬ್ಬರಿಗೂ ಬುದ್ಧಿವಾದ ಹೇಳಿ ಮುಂದೆ ಹೀಗೆ ವರ್ತಿಸದಂತೆ ನಿರ್ದೇಶನ ನೀಡಲಾಗಿದೆ ಎಂದು ಪಿಡಿಓ ಕೆ.ಎಸ್.ಪ್ರಕಾಶ್ ಅವರು ಪ್ರತಿಕ್ರಿಯಿಸಿದರು.
