ಹಾಸನ: ಭಾರಿ ಕುತೂಹಲ ಕೆರಳಿಸಿದ್ದ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಯ ಕಾರ್ಯಕಾರಿ ಮಂಡಳಿಯ ಅವಿಶ್ವಾಸ ನಿರ್ಣಯ ಸಭೆ ಇಂದು ನಡೆದಿದ್ದು ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾಯಿತು.
ಅಶೋಕ್ ಹಾರನಳ್ಳಿ ಬಣದಲ್ಲಿ ಗುರುತಿಸಿಕೊಂಡ ಹದಿಮೂರು ಜನರು ನೂತನ ಅಧ್ಯಕ್ಷರಾಗಿ ಬಿ.ಆರ್. ಗುರುದೇವ್, ಕಾರ್ಯದರ್ಶಿಯಾಗಿ ಜಿ.ಟಿ.ಕುಮಾರ್ ಹಾಗೂ ಖಜಾಂಚಿಯಾಗಿ ಶ್ರೀಧರ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಇದನ್ನು ಒಪ್ಪದ ಆರ್.ಟಿ. ದ್ಯಾವೇಗೌಡ ಹಾಗೂ ಚೌಡುವಳ್ಳಿ ಜಗದೀಶ್ ಬಣದ 11 ಸದಸ್ಯರು ಹಾಲಿ ಅಧ್ಯಕ್ಷ ಆರ್.ಟಿ. ದ್ಯಾವೇಗೌಡ ಅವರನ್ನೇ ತಮ್ಮ ಅಧ್ಯಕ್ಷರು ಎಂದು ನಿರ್ಣಯ ಅಂಗೀಕರಿಸಿಕೊಂಡರು.
ಎರಡು ಬಣಗಳ ಕಿತ್ತಾಟ ಮುಂದುವರೆದಿದ್ದು, ಎರಡೂ ತಂಡದವರು ಮಂಡಿಸಿರುವ ನಿರ್ಣಯದ ಪ್ರತಿಗಳನ್ನು ಈಗ ಬೆಂಗಳೂರಿನಿಂದ ವಿಶೇಷ ವೀಕ್ಷಕರಾಗಿ ಆಗಮಿಸಿರುವ ಸಹಕಾರ ಇಲಾಖೆಯ ಅಧಿಕಾರಿ ಜಗದೀಶ್ ಅವರಿಗೆ ನೀಡಿದ್ದು ಅವರು ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.
ಸದ್ಯ ಈ ಗೊಂದಲ ಇಂದು ಮುಕ್ತಾಯವಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಇನ್ನೂ ಗೊಂದಲ ಹೀಗೆ ಮುಂದುವರೆದರೆ ಮಲೆನಾಡು ತಾಂತ್ರಿಕ ಶಿಕ್ಷಣ ಸಮಿತಿಗೆ ಸರ್ಕಾರ ಆಡಳಿತ ಅಧಿಕಾರಿಯನ್ನು ನೇಮಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.