ಸಕಲೇಶಪುರ: ತಾಲೂಕಿನ ಮೂಗಲಿಯಲ್ಲಿ ಕಾಡಾನೆ ದಾಳಿಗೆ ಕೂಲಿ ಕಾರ್ಮಿಕ ಮಹಿಳೆ ಬಲಿಯಾಗಿದ್ದಾರೆ.
ಮೂಗಲಿ ಗ್ರಾಮದ ಶೋಭಾ (40) ಮೃತ ಮಹಿಳೆ. ಬೆಳಗ್ಗೆ ತೋಟಕ್ಕೆ ತೆರಳುತ್ತಿದ್ದ ಮಹಿಳೆ ಮೇಲೆ ದಾಳಿ ಮಾಡಿದ ಆನೆಯ ತುಳಿತಕ್ಕೆ ಆಕೆ ಬಲಿಯಾಗಿದ್ದಾರೆ.
ಈಚೆಗೆ ಕೊಡಗಿನಿಂದ ಬಂದಿರುವ ಆಕ್ರಮಣಕಾರಿಯಾಗಿ ವರ್ತಿಸುವ ದೈತ್ಯ ಆನೆ ಮೊದಲ ಬಲಿ ಪಡೆದಿದೆ.
ಮೃತ ಮಹಿಳೆ ಶೋಭಾ ಅವರು ಒಂದೂವರೆ ಎಕರೆ ಕಾಫಿ ತೋಟವನ್ನು ಹೊಂದಿದ್ದು ಅವರ ತಾಯಿ ರಾಜಮ್ಮ ಅವರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಆನೆ ದಾಳಿ ಮಾಡಿದೆ.
ಆಗ ರಾಜಮ್ಮ ಅವರು ಓಡಿ ಬಚಾವಾಗಿದ್ದು ಶೋಭಾ ಅವರು ಆನೆಯ ತುಳಿತಕ್ಕೆ ಸಿಲುಕಿದ್ದಾರೆ. ರಾಜಮ್ಮ ಅವರು ಬೆಳಗೋಡು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾಗಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
