ಸಕಲೇಶಪುರ: ಕೇವಲ 66 ಪೈಸೆ ಹಣಕ್ಕಾಗಿ ರೈತ ಒತ್ತಾಯ ಹಿಡಿದ ಪರಿಣಾಮ ಬ್ಯಾಂಕ್ ಕೊನೆಗೂ ಆ ಮೊತ್ತವನ್ನು ರೈತನ ಖಾತೆಗೆ ಜಮಾ ಮಾಡಿದ ಘಟನೆ ತಾಲೂಕಿನ ಹೊಸಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಹೊಸಕೊಪ್ಪಲು ಗ್ರಾಮದ ಬೆಳೆಗಾರ ಚೊಕ್ಕಣ್ಣಗೌಡ ಅವರು ಹಲವು ವರ್ಷಗಳ ಹಿಂದೆ ಕೆನರಾ ಬ್ಯಾಂಕ್‌ನಿಂದ ಸುಮಾರು 50 ಸಾವಿರ ರೂ. ಕೃಷಿ ಸಾಲ ಪಡೆದಿದ್ದರು. ಬಳಿಕ ಅವರು ಬಡ್ಡಿ ಸಮೇತ ಸಂಪೂರ್ಣ ಸಾಲವನ್ನು ತೀರಿಸಿದ್ದರೂ ಬ್ಯಾಂಕ್ ದಾಖಲೆಯ ಪ್ರಕಾರ 9 ರೂಪಾಯಿ 34 ಪೈಸೆ ಬಾಕಿ ಇದೆ ಎಂದು ತಿಳಿದುಬಂದಿತ್ತು.
ಈ ಹಿನ್ನೆಲೆಯಲ್ಲಿ ಫೆಬ್ರವರಿ 25ರಂದು ಬ್ಯಾಂಕ್ ಸಿಬ್ಬಂದಿ ಚೊಕ್ಕಣ್ಣಗೌಡ ಅವರಿಗೆ ಕರೆ ಮಾಡಿ 9 ರೂಪಾಯಿ 34 ಪೈಸೆ ಸಾಲ ಬಾಕಿ ಇರುವುದಾಗಿ ತಿಳಿಸಿ ಅದನ್ನು ಪಾವತಿಸುವಂತೆ ಸೂಚಿಸಿದರು. ಅದರಂತೆ ಫೆಬ್ರವರಿ 26ರಂದು ಅವರು ಸಕಲೇಶಪುರ ಪಟ್ಟಣದ ಕೆನರಾ ಬ್ಯಾಂಕ್ ಶಾಖೆಗೆ ಭೇಟಿ ನೀಡಿ 10 ರೂಪಾಯಿ ನೀಡಿ ಸಾಲವನ್ನು ಸಂಪೂರ್ಣವಾಗಿ ಕ್ಲಿಯರ್ ಮಾಡಿದರು.
ಬ್ಯಾಂಕ್ ಸಿಬ್ಬಂದಿ ನೀಡಿದ ರಸೀದಿಯಲ್ಲಿ 9 ರೂಪಾಯಿ 34 ಪೈಸೆ ಮಾತ್ರ ಉಲ್ಲೇಖವಾಗಿದ್ದರಿಂದ ಉಳಿದ 66 ಪೈಸೆ ಹಣವನ್ನು ವಾಪಸ್ ನೀಡುವಂತೆ ರೈತ ಚೊಕ್ಕಣ್ಣಗೌಡ ಪಟ್ಟು ಹಿಡಿದರು. ಈ ವಿಚಾರ ಮೇಲಧಿಕಾರಿಗಳ ಗಮನಕ್ಕೆ ಬಂದ ಬಳಿಕ ಬ್ಯಾಂಕ್ ಅಧಿಕಾರಿಗಳು ರೈತನ ಖಾತೆಗೆ 66 ಪೈಸೆ ಜಮಾ ಮಾಡಿದ್ದು, ಅದರ ಬಗ್ಗೆ ಎಸ್‌ಎಂಎಸ್ ಮೂಲಕ ಮಾಹಿತಿ ನೀಡಿದರು.

Leave a Reply

Your email address will not be published. Required fields are marked *