ಸಕಲೇಶಪುರ: ಪಟ್ಟಣದ ಅರೇಹಳ್ಳಿ ಬೀದಿಯ ನಮ ಕ್ಲಿನಿಕ್‌ನ ವೈದ್ಯಾಧಿಕಾರಿ ಡಾ॥ ರತನ್‌ ಅವರು ಸೇವೆಗೆ ರಾಜೀನಾಮೆ ಸಲ್ಲಿಸಿದ್ದು, ಮೇಲಾಧಿಕಾರಿಗಳ ಕಿರುಕುಳವೇ ಸೇವೆ ತೊರೆಯಲು ಕಾರಣ ಎನ್ನಲಾಗಿದೆ.
ಕಳೆದ ಎರಡು ವರ್ಷಗಳಿಂದ ಕ್ಲಿನಿಕ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ರತನ್‌ ಅವರು ಸಾರ್ವಜನಿಕರಿಗೆ ಹತ್ತಿರವಾಗಿದ್ದರು. ಸರಳತೆ, ಸ್ಪಂದನೆ ಹಾಗು ಗುಣಮಟ್ಟದ ಚಿಕಿತ್ಸೆಯಿಂದಾಗಿ ಜನಮನ್ನಣೆ ಗಳಿಸಿದ್ದರು. ಪಟ್ಟಣದ ಸ್ಲಂ ಹಾಗು ಬಡಾವಣೆಯ ಜನರ ಮನೆಗೆ ಭೇಟಿ ನೀಡಿ ಆರೋಗ್ಯ ಪರಿಶೀಲಿಸುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು.
ನಿರಂತರ ಅವಮಾನಕ್ಕೆ ಬೇಸರ:
ಕ್ಲಿನಿಕ್‌ನಲ್ಲಿ ಉತ್ತಮ ಸೇವೆ ನೀಡುತ್ತಿದ್ದ ವೈದ್ಯರು ಕರ್ತವ್ಯಕ್ಕೆ ಸೇರಿದ ದಿನದಿಂದಲೇ ಕೆಲ ಹಿರಿಯ ಅಧಿಕಾರಿಗಳಿಂದ ತಾರತಮ್ಯ ಹಾಗು ಮಾನಸಿಕ ಒತ್ತಡ ಎದುರಿಸುತ್ತಿದ್ದರು ಎನ್ನಲಾಗಿದೆ. ಜನರಿಗೆ ಪರಿಣಾಮಕಾರಿ ಸೇವೆ ನೀಡುತ್ತಿದ್ದರೂ ಅಲ್ಲಿಂದ ಬಿಡುಗಡೆಗೊಳಿಸಿ ಬೇರೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ತೆರಳುವಂತೆ ಅನಗತ್ಯ ಒತ್ತಡ ಹೇರಲಾಗುತ್ತಿತ್ತು. ಇಲಾಖೆಯ ಅಧಿಕೃತ ಸಭೆಗಳಲ್ಲಿ ಸಹೋದ್ಯೋಗಿಗಳ ಎದುರೇ ಅವಮಾನಿಸುವುದು, ವೃತ್ತಿಗೆ ಅಗೌರವ ಬರುವ ರೀತಿ ಚುಚ್ಚು ಮಾತನಾಡುತ್ತಿದ್ದರು. ಅಲ್ಲದೆ ಕ್ಲಿನಿಕ್‌ ಸಿಬ್ಬಂದಿ ಹಾಗು ವೈದ್ಯರ ಹಾಜರಾತಿ ಪಟ್ಟಿಗೆ ಸಹಿ ಹಾಕುವಂತಹ ಸಾಮಾನ್ಯ ಆಡಳಿತಾತಕ ವಿಚಾರಗಳಲ್ಲಿಯೂ ವಿನಾಕಾರಣ ವಿಳಂಬ ಮಾಡಿ ಮಾನಸಿಕವಾಗಿ ಕಿರುಕುಳ ನೀಡಲಾಗುತ್ತಿತ್ತು ಎಂಬ ಗಂಭೀರ ಆರೋಪ ಕೇಳಿಬಂದಿವೆ.
ನಿರಂತರ ಅವಮಾನ ಮತ್ತು ಒತ್ತಡದ ನಡುವೆಯೂ ಸೇವೆ ಮುಂದುವರಿಸಿದ್ದ ವೈದ್ಯರು ಕೊನೆಗೆ ಬೇಸತ್ತು ರಾಜೀನಾಮೆ ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಕರ್ತವ್ಯಕ್ಕೆ ಗೈರಾಗಿದ್ದ ಡಾ॥ ರತನ್‌ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿ ತೆರಳಿರುವುದರಿಂದ ನಮ ಕ್ಲಿನಿಕ್‌ ಮತ್ತೊಮೆ ವೈದ್ಯರಿಲ್ಲದ ಸ್ಥಿತಿಗೆ ತಲುಪಿದೆ. ಪ್ರತಿಕ್ರಿಯೆಗೆ ಪ್ರಯತ್ನಿಸಿದರೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಸಂಪರ್ಕಕ್ಕೆ ಸಿಗಲಿಲ್ಲ.

Leave a Reply

Your email address will not be published. Required fields are marked *