ಹಾಸನ: ಉರಿಲಿಂಗ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ಅವರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಜಿಲ್ಲಾ ವಕೀಲರ ಸಂಘದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಿದರು.
ಜಿಲ್ಲಾ ನ್ಯಾಯಾಲಯ ಆವರಣದಿಂದ ಮೆರವಣಿಗೆಯಲ್ಲಿ ಬಂದ ನೂರಾರು ವಕೀಲರು ಜಿಲ್ಲಾಧಿಕಾರಿ ಕಚೇರಿ ಎದುರು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸ್ವಾಮೀಜಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಲು ವಕೀಲರು ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ್ದರೂ, ಡಿಸಿ ಕೆ.ಎಸ್. ಲತಾಕುಮಾರಿ ಮನವಿ ಸ್ವೀಕರಿಸಲು ಬಾರದ ಕಾರಣ ವಕೀಲರು ಅಸಮಾಧಾನಗೊಂಡರು.
ಅಂತಿಮವಾಗಿ ಎಡಿಸಿ ಮಂಜುನಾಥ್ ಮನವಿ ಸ್ವೀಕರಿಸಲು ಬಂದರೂ, ಜಿಲ್ಲಾಧಿಕಾರಿಯೇ ಬರಬೇಕೆಂದು ವಕೀಲರು ಪಟ್ಟು ಹಿಡಿದು ಕೆಲ ಹೊತ್ತು ಕಾದರು.
ಆದರೆ ಡಿಸಿ ಬಾರದ ಹಿನ್ನೆಲೆಯಲ್ಲಿ ವಕೀಲರು ರೊಚ್ಚಿಗೆದ್ದು, ಬಿ.ಎಂ. ರಸ್ತೆ ತಡೆದು ತೀವ್ರ ಪ್ರತಿಭಟನೆ ನಡೆಸಿದರು.
ಜಿಲ್ಲಾಧಿಕಾರಿ ವಿರುದ್ಧ ಘೋಷಣೆಗಳನ್ನು ಕೂಗಿದ ವಕೀಲರು, ಆಕ್ರೋಶ ವ್ಯಕ್ತಪಡಿಸಿದ ಪರಿಣಾಮ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ಈ ವೇಳೆಯಲ್ಲಿ ಕಚೇರಿಯಿಂದ ಹೊರಟ ಜಿಲ್ಲಾ ಕಾರ್ಮಿಕಾಧಿಕಾರಿ ಯಮುನಾ ಅವರ ಕಾರು ತಡೆದ ವಕೀಲರು, ಅವರೊಂದಿಗೆ ವಾಗ್ವಾದ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಕಾರಿಗೆ ದಾರಿ ಬಿಡದೆ ಪ್ರತಿಭಟನೆ ಮುಂದುವರಿಸಿದ ವಕೀಲರಿಂದ ಕೆಲ ಹೊತ್ತು ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತ್ತು.

Leave a Reply

Your email address will not be published. Required fields are marked *