ಹಾಸನ: ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಏನು ಹೇಳಬೇಕೋ ಅದೆಲ್ಲವನ್ನೂ ಹೇಳಿದ್ದೇನೆ. ಇನ್ನು ಮುಂದೆ ಆ ಬಗ್ಗೆ ಮಾತನಾಡುವುದಿಲ್ಲವೆಂದು ವಿಧಾನ ಪರಿಷತ್ ಸದಸ್ಯ ಡಾ॥ ಯತೀಂದ್ರ ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದರು.
ಧಾರ್ಮಿಕ ಕಾರ್ಯಕ್ರಮ ನಿಮಿತ್ತ ಹಾಸನಕ್ಕೆ ಬಂದಿದ್ದ ಅವರು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಈ ವಿಚಾರದ ಕುರಿತು ಏನೇ ಮಾತನಾಡಿದರೂ ಮಾಧ್ಯಮದವರು ವಿವಾದ ಮಾಡುತ್ತಾರೆ. ದಿನಪೂರ್ತಿ ಅದೇ ಚರ್ಚೆ ಮಾಡಲಾಗುತ್ತದೆ. ನಾನು ಏನು ಹೇಳಬೇಕೋ ಅದನ್ನು ಹೇಳಿದ್ದೇನೆ. ಅದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲವೆಂದರು.
ಯಾವ ಶಾಸಕರು, ಯಾವ ಕಾರಣಕ್ಕೆ ವಿದೇಶ ಪ್ರವಾಸ ಹೋಗಿದ್ದಾರೆಂಬುದು ನನಗಂತೂ ಗೊತ್ತಿಲ್ಲ. ಅವರು ಸ್ವಂತ ಹಣದಲ್ಲಿ ಪ್ರವಾಸ ಕೈಗೊಂಡಿದ್ದಾರೆ ಹೊರತು ಸರ್ಕಾರಿ ಹಣ ಪಡೆದಿಲ್ಲ. ವೈಯಕ್ತಿಕ ಪ್ರವಾಸ ಮಾಡುವುದು ತಪ್ಪು ಎನ್ನಲು ಆಗುವುದಿಲ್ಲ. ಮುಖ್ಯಮಂತ್ರಿ ಕುರ್ಚಿಗಾಗಿ ಜಟಾಪಟಿ ನಡೆಯಯುತ್ತಿದೆ ಎನ್ನುವುದು ಕೇವಲ ಊಹಾಪೋಹ. ರಾಜ್ಯದಲ್ಲಿ ಅಂತಹ ಬೆಳವಣಿಗೆ ಏನೂ ಇಲ್ಲವಾದ್ದರಿಂದಲೇ ಶಾಸಕರು ಆರಾಮಾಗಿ ವಿದೇಶಕ್ಕೆ ಹೋಗಿದ್ದಾರೆಂದರು.
