ಹಾಸನ: ನಗರದ ತಣ್ಣೀರುಹಳ್ಳದಲ್ಲಿರುವ ಖಾಸಗಿ ಬ್ಯಾಂಕ್ನ ಮ್ಯಾನೇಜರ್ ಪೂಜಾ ಎಂಬುವವರ ವಿರುದ್ಧ ಸುಮಾರು 5 ಕೋಟಿ ರೂಪಾಯಿ ವಂಚನೆಯ ಗಂಭೀರ ಆರೋಪ ಕೇಳಿಬಂದಿದೆ.
200ಕ್ಕೂ ಹೆಚ್ಚು ಗ್ರಾಹಕರಿಂದ ಹಣ ಪಡೆದು ಮೋಸ ಮಾಡಿರುವುದಾಗಿ ದೂರುಗಳು ದಾಖಲಾಗಿವೆ.
ಫಿಕ್ಸೆಡ್ ಡೆಪಾಸಿಟ್ ಇಟ್ಟರೆ 1 ಕೋಟಿ ರೂ. ಲೋನ್ ವ್ಯವಸ್ಥೆ ಮಾಡಿಸಿಕೊಡುವುದಾಗಿ ಭರವಸೆ ನೀಡಿ ಗ್ರಾಹಕರಿಂದ ಲಕ್ಷಾಂತರ ರೂಪಾಯಿ ಹಣ ಸಂಗ್ರಹಿಸಿದ್ದಾಗಿ ಆರೋಪಿಸಲಾಗಿದೆ. 5 ಲಕ್ಷ, 10 ಲಕ್ಷ, 25 ಲಕ್ಷ ಸೇರಿದಂತೆ ಹೆಚ್ಚಿನ ಮೊತ್ತವನ್ನು ಕೆಲವರು ನೇರವಾಗಿ ಪೂಜಾ ಅವರ ಖಾತೆಗೆ ಜಮಾ ಮಾಡಿದ್ದರೆ, ಇನ್ನೂ ಕೆಲವರು ನಗದು ರೂಪದಲ್ಲಿ ಹಣ ನೀಡಿರುವುದಾಗಿ ತಿಳಿದುಬಂದಿದೆ.
ಈ ಪ್ರಕರಣ ಬೆಳಕಿಗೆ ಬಂದ ನಂತರ ಬ್ಯಾಂಕ್ ಮುಂದೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸಿದರು. 200ಕ್ಕೂ ಹೆಚ್ಚು ಮಂದಿ ಪೆನ್ಷನ್ ಮೊಹಲ್ಲಾ ಠಾಣೆ ಎದುರು ಜಮಾಯಿಸಿ ಪೂಜಾ ಬಮಧನಕ್ಕೆ ಒತ್ತಾಯಿಸಿದರು.
ಕಳೆದ ಮೂರು ದಿನಗಳಿಂದ ಮ್ಯಾನೇಜರ್ ಪೂಜಾ ಸಂಪರ್ಕಕ್ಕೆ ಸಿಗದೆ ಇರುವುದಾಗಿ ತಿಳಿದುಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
