ಹಾಸನ: ಇರಾನ್–ಇಸ್ರೇಲ್ ಯುದ್ಧ ಪರಿಸ್ಥಿತಿಯ ನಡುವೆ ದುಬೈನಲ್ಲಿ 62 ಕನ್ನಡಿಗರು ಸಿಲುಕಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಅರಸೀಕೆರೆ ನಗರದ ಐವರು ಸೇರಿ ಒಟ್ಟು 62 ಮಂದಿ ದುಬೈನಲ್ಲಿ ಸಿಲುಕಿಕೊಂಡಿದ್ದು, ಮೂರು ಬಾರಿ ಟಿಕೆಟ್ ಬುಕ್ ಮಾಡಿದರೂ ವಿಮಾನ ಸಿಗದೆ ಪರದಾಡುತ್ತಿದ್ದಾರೆ ಎನ್ನಲಾಗಿದೆ. ವೃದ್ಧರು ಹಾಗೂ ಮಕ್ಕಳೂ ಕೂಡ ಈ ತಂಡದಲ್ಲಿ ಸೇರಿದ್ದಾರೆ ಎಂದು ಅರಸೀಕೆರೆಯ ಜಯದೇವ್ ಮಾಹಿತಿ ಹಂಚಿಕೊಂಡಿದ್ದಾರೆ.
ದುಬೈನ Millennium Downtown Hotel ನಲ್ಲಿ ತಂಗಿರುವ ಈ ಕನ್ನಡಿಗರು, ವಿಶ್ವ ವಿಖ್ಯಾತ Museum of the Future ಎದುರಿನ ಹೋಟೆಲ್ನಲ್ಲಿ ಇದ್ದಾರೆ ಎಂದು ತಿಳಿಸಿದ್ದಾರೆ.ಕಾ
ಕಾರ್ಯಕ್ರಮವೊಂದರ ನಿಮಿತ್ತ ದುಬೈಗೆ ತೆರಳಿದ್ದ ಅರಸೀಕೆರೆ ಮೂಲದ ಐವರು ಸೇರಿದಂತೆ ಇತರರು, ಇರಾನ್–ಇಸ್ರೇಲ್ ಯುದ್ಧದ ಪರಿಣಾಮ ವಿಮಾನ ಸೇವೆಯಲ್ಲಿ ವ್ಯತ್ಯಯ ಉಂಟಾಗಿ ವಾಪಸ್ ಬರಲು ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
ಸಿಎಂ, ಡಿಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಮಾತನಾಡಿದ್ದಾರೆ ಎಂದು ತಿಳಿಸಿದರೂ, ಇನ್ನೂ ವಾಪಸ್ ಬರಲು ಯಾವುದೇ ಸ್ಪಷ್ಟ ವ್ಯವಸ್ಥೆ ಆಗಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
“ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆದಷ್ಟು ಬೇಗನೆ ನಮ್ಮನ್ನ ಸುರಕ್ಷಿತವಾಗಿ ವಾಪಸ್ ಕರೆಸಿಕೊಳ್ಳುವ ವ್ಯವಸ್ಥೆ ಮಾಡಬೇಕು” ಎಂದು ಜಯದೇವ್ ಮನವಿ ಮಾಡಿದ್ದಾರೆ.
