ಹಾಸನ: ನಮ್ಮ ಮನೆಯೊಳಗಿನ ಆಂಗ್ಲ ವ್ಯಾಮೋಹ ಹಾಗೂ ಕೇಂದ್ರ ಸರ್ಕಾರದ ಹಿಂದಿ ಹೇರಿಕೆ ವಿರುದ್ಧ ಜಾಗೃತರಾಗದಿದ್ದರೆ ಕನ್ನಡ ರಾಜ್ಯೋತ್ಸವಕ್ಕೆ ಅರ್ಥ ಬರುವುದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣಬೈರೇಗೌಡ ಹೇಳಿದರು.
ಜಿಲ್ಲಾಡಳಿತ ವತಿಯಿಂದ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ 70ನೇ ಕನ್ನಡ ರಾಜ್ಯೋತ್ಸವದಲ್ಲಿ ಮಾತನಾಡಿದ ಅವರು, ವರ್ಷಕ್ಕೆ ಒಂದು ದಿನ ಬಾವುಟ ಹಾರಿಸಿ ತುತ್ತೂರಿ ಊದಿದರೆ ಸಾವಿರಾರು ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಉಳಿಯುವುದಿಲ್ಲ. ಕನ್ನಡದ ಕಾಯಕ ಪ್ರತಿನಿತ್ಯ ನಡೆಯಬೇಕು. ನಿತ್ಯ ಈ ಕೆಲಸ ಮಾಡದಿದ್ದರೆ ಕಷ್ಟವಾಗುತ್ತದೆ. ಈ ದಿನ ಕನ್ನಡ ಕಾಯಕ ಮಾಡಲು ಸ್ಫೂರ್ತಿಯ ದಿನವಾಗಲಿ ಎಂದರು.

