ಹೊಳೆನರಸೀಪುರ: ನ್ಯಾಯಾಲಯದ ಸೂಚನೆಯಂತೆ ತಾಲ್ಲೂಕಿನ ಹಳೆಕೋಟೆ ಹೋಬಳಿಯ ಶೀತ ಪೀಡಿತ ಕುಂಚೇವು ಹೊಸಳ್ಳಿ ಗ್ರಾಮಕ್ಕೆ ಗುರುವಾರ ಪ್ರಾದೇಶಿಕ ಆಯುಕ್ತ ನಿತೀಶ್‌ ಪಾಟೀಲ್‌ ಭೇಟಿ ನೀಡಿ ಪರಿಶೀಲಿಸಿದರು.

ಪಟ್ಟಣದ ಹೇಮಾವತಿ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕುಂಚೆವು ಹೊಸಳ್ಳಿ ಗ್ರಾಮದ ಪಕ್ಕದಲ್ಲಿ ಹೇಮಾವತಿ ಎಡದಂಡೆ ವಿತರಣಾ ನಾಲೆ ಹಾದು ಹೋಗಿದ್ದು ಗ್ರಾಮದ ಹಿರಿಯಣ್ಣ ಮತ್ತು ಇತರೆ 44 ರೈತರು ಗ್ರಾಮವನ್ನು ಶೀತ ಪಿಡಿತ ಪ್ರದೇಶವೆಂದು ಘೋಷಣೆ ಮಾಡಬೇಕೆಂದು ಉಚ್ಚ ನ್ಯಾಯಾಲಯ ಮೊರೆ ಹೋಗಿದ್ದಾರೆ. ನ್ಯಾಯಾಲಯದ ಆದೇಶದಂತೆ ಶೀತ ಪಿಡಿತ ಪ್ರದೇಶವಾದ ಕುಂಚೆವು ಗ್ರಾಮಕ್ಕೆ ತೆರಳಿ ಪರಿಶೀಲಿಸುತ್ತಿದ್ದೇವೆ ಎಂದರು.
ಅರ್ಜಿದಾರರು ಉಚ್ಚ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಎಲ್ಲಾ ದಾಖಲಾತಿಗಳು ಪ್ರಾದೇಶಿಕ ಆಯುಕ್ತರ ಕಚೇರಿಗೆ ಬಂದಿರುತ್ತವೆ. ಸದರಿ ವಿಚಾರಕ್ಕೆ ಸಂಬಂಧಿಸಿ ಜ. 22ರಂದು ಸ್ಥಳ ಪರಿಶೀಲಿಸುವಂತೆ ನ್ಯಾಯಾಲಯ ಆದೇಶ ನೀಡಿತ್ತು. ಅದರಂತೆ ಎಲ್ಲಾ ಅರ್ಜಿದಾರರು ಹಾಗು ಸದಸ್ಯರ ಭೇಟಿ ಮಾಡಿ ಸಮಸ್ಯೆಯ ಸಂಪೂರ್ಣ ಮಾಹಿತಿಯನ್ನ ಪಡೆಯಲಿದ್ದೇವೆಂದು ತಿಳಿಸಿದರು.
ಪರಿಶೀಲನೆಗಾಗಿ ಗ್ರಾಮಕ್ಕೆ ಭೇಟಿ ನೀಡಿದ್ದ ಪ್ರಾದೇಶಿಕ ಆಯುಕ್ತರಾದ ನಿತೀಶ್‌ ಪಾಟೀಲ್‌ ಜೊತೆ ರೈತರು ತಮ ತೊಂದರೆ ಗಳ ಬಗ್ಗೆ ಮನವರಿಕೆ ಮಾಡಿಕೊಟ್ಟರು.

ನಮ ಗ್ರಾಮ ಶೀತ ಪಿಡಿತ ಪ್ರದೇಶವಾಗಿದೆ. ಮನೆಗಳು ಶೀತದಿಂದ ಯಾವ ಸಂದರ್ಭದಲ್ಲಿ ಆದರೂ ಕುಸಿದು ಬೀಳಬಹುದು. ಅನಾಹುತ ಸಂಭವಿಸಬಹುದು, ಗ್ರಾಮವನ್ನು ಸ್ಥಳಾಂತರಿಸಿ ಪರಿಹಾರ ಕೊಡಬೇಕು. ಪ್ರತಿ ಮನೆಗಳನ್ನು ಪರಿಶೀಲಿಸಿ ಅವುಗಳಿಗೆ ತಗಲುವ ಅಂದಾಜು ವೆಚ್ಚವನ್ನು ಭರಿಸಬೇಕು. ಶೀತ ಪ್ರದೇಶವಾದ್ದರಿಂದ ಬಹುತೇಕ ಜನರು ಶೀತದಿಂದ ಬಳಲುತ್ತಿದ್ದಾರೆ. ಅನೇಕ ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಯಾವುದಾದರೂ ಎತ್ತರ ಪ್ರದೇಶಕ್ಕೆ ಸ್ಥಳಾಂತರಿಸಿ ಮನೆ ನಿರ್ಮಿಸಿ ಕೊಳ್ಳಲು ಪರಿಹಾರ ಕೊಡಬೇಕೆಂದು ಮನವಿ ಮಾಡಿದರು.
ಅಪರ ಜಿಲ್ಲಾಧಿಕಾರಿ ಜಗದೀಶ್‌ ಗಂಗಣ್ಣವರ್‌, ವಿಶೇಷ ಭೂಸ್ವಾಧೀನಾಧಿಕಾರಿ ಮಂಜುನಾಥ್‌, ನೀರಾವರಿ ಕಾರ್ಯಪಾಲಕ ಅಭಿಯಂತರ ಮಹೇಶ್‌, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ಮನೋಜ್‌‍, ಮಹೇಶ್‌, ತಹಶೀಲ್ದಾರ್‌ ವೈ.ಎಂ.ರೇಣು ಕುಮಾರ್‌, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮುನಿರಾಜ್‌‍ ಹಾಗು ಇತರರಿದ್ದರು.

Leave a Reply

Your email address will not be published. Required fields are marked *