ಹಾಸನ: ತಾಲ್ಲೂಕಿನ ಕಲ್ಕೆರೆ ಬಳಿ ವ್ಯಾನಿಟಿ ಬ್ಯಾಗ್, ಚಪ್ಪಲಿ ಹಾಗೂ ಬಟ್ಟೆ ಎಸೆದು ನಿಗೂಢ ಕಣ್ಮರೆಯಾಗಿದ್ದ ಮಹಿಳೆಯ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಫೆ. 12ರಂದು ಚಿಕ್ಕಮಗಳೂರಿನ ಸಂಬಂಧಿಕರ ಮದುವೆಗೆ ಬಂದಿದ್ದ ಕುಣಿಗಲ್ ತಾಲ್ಲೂಕು ಯಲಿಯೂರು ಗ್ರಾಮದ ಪ್ರಿಯಾಂಕ ಬದುಕಿದ್ದು, ಈ ಸುದ್ದಿ ರೋಚಕ ತಿರುವು ಪಡೆದಿದೆ. ಎರಡು ದಿನಗಳಿಂದ ಆಕೆ ನಾಪತ್ತೆಯಾಗಿದ್ದು ಮಾತ್ರವಲ್ಲದೆ ಕೆರೆ ಸಮೀಪ ಬಟ್ಟೆ ಕಾಣಿಸಿದ್ದರಿಂದ ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಚಿನ್ನಾಭರಣ ದೋಚಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಆ ಮಹಿಳೆಯೇ ತಾನು ಕೊಲೆಯಾಗಿದ್ದೇನೆಂದು ಬಿಂಬಿಸಿಕೊಳ್ಳಲು ಈ ಷಡ್ಯಂತ್ರ ಮಾಡಿದ್ದಳು. ಅದಕ್ಕೆ ಮುಖ್ಯ ಕಾರಣ ಪ್ರಿಯಕರ ಎಂಬುದು ಗೊತ್ತಾಗಿದೆ.
ಬಿಹಾರ ಮೂಲದ ವ್ಯಕ್ತಿಯೊಬ್ಬನನ್ನು ಪ್ರೀತಿಸುತ್ತಿದ್ದ ಆಕೆ ಆತನೊಂದಿಗೆ ಸಂಸಾರ ಮಾಡಲು ಈ ಷಡ್ಯಂತ್ರ ಹೆಣೆದಿದ್ದಳು. ಈ ಪ್ರಕರಣ ಇಡೀ ಜಿಲ್ಲೆಯಲ್ಲಿ ಹಲ್ ಚಲ್ ಎಬ್ಬಿಸಿತ್ತು. ಹಾಸನ ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಬೆಳಿಗ್ಗೆಯಿಂದ ಕೆರೆಯಲ್ಲಿ ಶವಕ್ಕಾಗಿ ಶೋಧ ನಡೆಸಿದರು. ಆದರೆ ಇಲ್ಲಿ ಆಗಿರುವುದೇ ಬೇರೆ. ಸದ್ಯ ಪ್ರಿಯಾಂಕ ಪ್ರಿಯಕರೊಂದಿಗೆ ಕುಣಿಗಲ್ ನಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾಳೆ ಎಂದು ತಿಳಿದುಬಂದಿದೆ.
